ಶುಕ್ರವಾರ, ಸೆಪ್ಟೆಂಬರ್ 11, 2026

ಪದ್ಯಬಂಧದಲ್ಲಿ ವಿನೂತನ ರಾಮಾಯಣ

 ಅವ್ಯಯ ಎಂಬ ಕಾವ್ಯನಾಮದಿಂದ ಚೇತನ್ ಅವರು ಬರೆದಿರುವಂತಹ ಪ್ರತಿಮಾಲಾರಾಮಾಯಣ ಚೇತೋಹಾರಿಯಾಗಿದೆ. ಈ ಮೊದಲು ಕನ್ನಡ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಚೇತನ್ ಅವರ ಅನೇಕ ಬಿಡಿ ಕವಿತೆಗಳನ್ನು ಓದಿದ್ದೆ. ಎಲ್ಲವೂ ಸುಂದರವಾಗಿದ್ದವು. ವಾಣಿಜ್ಯ ಶಾಸ್ತ್ರದಲ್ಲಿ ಪಿ.ಹೆಚ್.ಡಿ ಮಹಾಪ್ರಬಂಧಕ್ಕಾಗಿ ಸಂಶೋಧನೆ ನಡೆಸುತ್ತಿರುವ ಚೇತನ್ ಲಲಿತವಾದ ಶೈಲಿಯಲ್ಲಿ ಛಂದೋಬದ್ಧವಾದ ಕಾವ್ಯಗಳನ್ನು ಬರೆಯುವುದು ವಿಶೇಷವೇ ಸರಿ. ಮುಕ್ತಕೇ ಕವಯೋನಂತಾಃ (ಬಿಡಿಗವಿತೆಗಳನ್ನು ಬರೆಯುವ ಕವಿಗಳು ಬೇಕಾದಷ್ಟು ಜನರಿದ್ದಾರೆ) ಎಂಬ ಮಾತಿನಂತೆ ಕೇವಲ ಮುಕ್ತಕಗಳನ್ನೇ ಬರೆಯುತ್ತಿದ್ದರೆ ಚೇತನ್ ಅವರ ಪ್ರತಿಭೆಯನ್ನು ಕಂಡು ಅಷ್ಟೇನೂ ಬೆರಗಾಗುತ್ತಿರಲಿಲ್ಲ. ೧೪೨ ಪದ್ಯಗಳಿಂದ ಕೂಡಿದ ಪ್ರತಿಮಾಲಾ ರಾಮಾಯಣ ಎಂಬ ಖಂಡಕಾವ್ಯವನ್ನು ಓದಿದಾಗ ಕವಿಪ್ರತಿಭೆಯ ಕುರಿತಾಗಿ ಅತಿಶಯವಾದ ಮೆಚ್ಚುಗೆ ಮೂಡುವುದರಲ್ಲಿ ಸಂಶಯವಿಲ್ಲ.

ಪ್ರತಿಮಾಲೆಯೆಂದರೆ ಅಂತ್ಯಾಕ್ಷರಿ. ಈ ಆಟದಲ್ಲಿ ಸ್ಪರ್ಧಿಗಳು ಸಾಲಾಗಿ ಅಥವಾ ಎರಡು ತಂಡಗಳಾಗಿ ಕುಳಿತುಕೊಳ್ಳುತ್ತಾರೆ. ಪದ್ಯದ ಕೊನೆಯ ಅಕ್ಷರದಿಂದ ಮುಂದಿನ ಸ್ಪರ್ಧಿ ಪದ್ಯವನ್ನು ಆರಂಭಿಸಬೇಕು. ಸಿನೆಮಾ ಹಾಡುಗಳ ಅಂತ್ಯಾಕ್ಷರಿ ಆಟ ಪ್ರಸಿದ್ಧವಾಗಿದೆ. ಸಂಸ್ಕೃತದಲ್ಲಿ ಶ್ಲೋಕಗಳನ್ನು ಹೇಳುವುದರ ಮೂಲಕವೂ ಪ್ರತಿಮಾಲಾ ಕ್ರೀಡೆ ನಡೆಯುತ್ತದೆ.

ಸಮಗ್ರ ರಾಮಾಯಣದ ಕತೆಯನ್ನು ಈ ರೀತಿಯ ಶ್ಲೋಕಗಳಿಂದ ಕಟ್ಟಿಕೊಟ್ಟದ್ದು ಪ್ರತಿಮಾಲಾರಾಮಾಯಣದ ವೈಶಿಷ್ಟ್ಯ. ಅಂದರೆ ಮೊದಲನೆಯ ಶ್ಲೋಕ ಧಾರೆ ಎಂದು ರೆ ಅಕ್ಷರದಿಂದ ಅಂತ್ಯವಾದರೆ, ಎರಡನೆಯ ಶ್ಲೋಕವನ್ನು ರ್ ಎಂಬ ವ್ಯಂಜನದಿಂದ ರಾಯನಾಗಿದ್ದ ಎಂದು ಆರಂಭಿಸಲಾಗಿದೆ. ಎರಡನೆಯ ಶ್ಲೋಕ ರವಿಕುಲಜಗೆಎಂದು ಗೆ ಅಕ್ಷರದಿಂದ ಅಂತ್ಯವಾದ್ದರಿಂದ ಮೂರನೆಯ ಶ್ಲೋಕವನ್ನು ಗ್ ಎಂಬ ವ್ಯಂಜನದಿಂದ ಗುಡಿಗೆ ಗೋಪುರವುಂಟು ಎಂದು ಆರಂಭಿಸಿದ್ದಾರೆ. ಹೀಗೆ ಸಮಗ್ರ ಕಾವ್ಯದಲ್ಲಿ ಹಿಂದಿನ ಪದ್ಯದ ಕೊನೆಯ ಅಕ್ಷರದಿಂದ ಮುಂದಿನ ಪದ್ಯವನ್ನು ಆರಂಭಿಸಲಾಗಿದೆ. ಕಾವ್ಯದ ಮುನ್ನುಡಿಯಲ್ಲಿ ಹೇಳಿದಂತೆ ಡಿವಿಜಿಯವರ ಕಗ್ಗದ ಶೈಲಿ ಕವಿಯನ್ನು ಆಕರ್ಷಿಸಿದೆ. ಆದ್ದರಿಂದ ಡಿವಿಜಿಯವರು ಬಳಸಿದ ಪಂಚಮಾತ್ರಾಗತಿಯಲ್ಲಿಯೇ ಈ ಕಾವ್ಯವನ್ನು ಬರೆಯಲಾಗಿದೆ. ಆದಿಪ್ರಾಸದ ನಿಯಮವನ್ನು ಪಾಲಿಸಲಾಗಿದೆ. ಶ್ಲೋಕಗಳಿಗೆ ಗದ್ಯರೂಪದ ತಾತ್ಪರ್ಯವನ್ನೂ ಪ್ರಕಟಿಸಲಾಗಿದೆ.

ಛಂದಸ್ಸು ಹಾಗೂ ಆರಂಭಿಕ ಅಕ್ಷರಗಳ  ನಿಬಂಧನೆಯನ್ನು ಹಾಕಿಕೊಂಡ ನಂತರ ಮನಸ್ಸಿಗೆ ತೋಚಿದಂತೆ ಗೀಚಿ ಕಾವ್ಯವನ್ನು ಪೂರ್ತಿಗೊಳಿಸುವ ಜಾಯಮಾನ ಚೇತನ್ ಅವರದ್ದಲ್ಲ. ಈ ಕಾವ್ಯದ ಪ್ರತಿ ಪದ್ಯವೂ ಸುಂದರವಾಗಿದೆ. ರಾಮಾಯಣದ ಕಥಾವಸ್ತು ನಮಗೆ ಸುಪರಿಚಿತವಾದುದರಿಂದ ಕತೆಯನ್ನು ತಿಳಿದುಕೊಳ್ಳಲು ಈ ಗ್ರಂಥವನ್ನು ಓದಬೇಕಾಗಿಲ್ಲ. ಸಮಗ್ರ ರಾಮಾಯಣದ ಕತೆ ಶಾಂತವಾಗಿ ಹರಿಯುವ ನದಿಯಂತೆ ಈ ಕಾವ್ಯದಲ್ಲಿ ಹರಿಯುತ್ತದೆ. ಎಲ್ಲಿಯೂ ಹಠಾತ್ತಾದ ವೇಗವಿಲ್ಲ. ಅಥವಾ ಅತಿವಿಸ್ತರವಾದ ವರ್ಣನೆಗಳಿಲ್ಲ. ಪ್ರತಿ ಪುಟದಲ್ಲೂ ಅಳಿಲು ಹಾಗೂ ರಾಮಮಂದಿರದ ಚಿತ್ರಗಳನ್ನು ಜೋಡಿಸಿ ರಚಿಸಿದ ಪುಟವಿನ್ಯಾಸ ಅಳಿಲುಸೇವೆಯನ್ನೂ ರಾಮಮಂದಿರನಿರ್ಮಾಣವನ್ನೂ ಸೂಚ್ಯವಾಗಿ ಹೇಳುತ್ತದೆ. 

ಪ್ರಾಸನಿರ್ವಹಣೆಯನ್ನೂ ತ್ರಾಸದಿಂದ ಮಾಡಿದಂತೆ ತೋರುವುದಿಲ್ಲ. ಸಹಜವಾದ ಕನ್ನಡ-ಸಂಸ್ಕೃತ ಪದಗಳು ಪ್ರಾಸಸ್ಥಾನದಲ್ಲಿ ಚಮತ್ಕಾರವನ್ನು ಹೆಚ್ಚಿಸಿವೆ. ಅಲ್ಲಲ್ಲಿ ಬಳಸಿದ ಉಪಮೆಗಳಂತೂ ನಿಜಕ್ಕೂ ರಸಾಸ್ವಾದವನ್ನು ಉತ್ತುಂಗಕ್ಕೆ ಒಯ್ಯುತ್ತವೆ. ಉದಾಹರಣೆಗೆ ವನವಾಸಕ್ಕೆ ಹೊರಟ ರಾಮನೊಂದಿಗೆ ಸೀತೆ-ಲಕ್ಷ್ಮಣರೂ ಹೊರಟು ನಿಂತರು ಎಂಬುವುದರ ವರ್ಣನೆ ಹೀಗಿದೆ. –

ಕಾಕುತ್ಸ್ಥನನು ಸೇರಿದರು ಸೀತೆ ಲಕ್ಷ್ಮಣರು ಸಾಕೇತರವಿಗರುಣಸಂಧ್ಯೆಯರ ಹಾಗೆ

ಸೂರ್ಯನನ್ನು ಸಂಧ್ಯೆ ಹಾಗೂ ಅರುಣರು ಸೇರಿದಂತೆ ರಾಮನನ್ನು ಸೀತೆ ಹಾಗೂ ಲಕ್ಷ್ಮಣರು ಸೇರಿದರು ಎಂಬರ್ಥ.

 ಅಂತೆಯೇ ರಾವಣನ ಹತ್ತು ತಲೆಗಳ ವರ್ಣನೆ-

ಗರಳತರುವಿನ ರೆಂಬೆಗಳು ಹಬ್ಬಿದಂತೆ ದಶ- | -ಶಿರಗಳಿದ್ದವು ತನ್ನ ಭೀಷಣಾಕೃತಿಗೆ.

ವಿಷವೃಕ್ಷದ ರೆಂಬೆಗಳಂತೆ ರಾವಣನ ತಲೆಗಳಿದ್ದವು ಎಂಬುವುದು ತಾತ್ಪರ್ಯ.

ಇಂತಹ ಹತ್ತಾರು ಉಪಮೆಗಳನ್ನು ಕಾವ್ಯದಲ್ಲಿ ಕಾಣಬಹುದು.

ಪ್ರಾಸ, ಪ್ರತಿಮಾಲೆ, ಛಂದಸ್ಸು ಮುಂತಾದ ನಿಯಮಗಳನ್ನನುಸರಿಸಿ ಬರೆದರೆ ಪದ್ಯಗಳು ಕ್ಲಿಷ್ಟವಾಗಿ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಎಂಬ ಭ್ರಾಂತಿ ಅನೇಕರಿಗಿದೆ. ಕೆಲವು ಕವಿಗಳ ರಚನೆಯಗಳನ್ನು ನೋಡಿದಾಗ ಅದು ನಿಜ ಎಂದೆನಿಸುವುದೂ ಇದೆ . ಸುಂದರವಾದ ವಿಷಯವನ್ನು, ಸುಂದರವಾದ ವರ್ಣನೆಯೊಂದಿಗೆ ಪ್ರಾಸ-ಛಂದಸ್ಸುಗಳಿಗನುಸಾರವಾಗಿ ಹೇಳಿದಾಗ ಬಂಗಾರದ ಹೂವಿಗೆ ಸುವಾಸನೆ ಮೂಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕಾವ್ಯದ ಪದ್ಯಗಳನ್ನು ಗಮನಿಸಬಹುದು.

ವಿಭೀಷಣ ರಾಮನನ್ನು ಸೇರಿದ ಪ್ರಸಂಗ -

ಲತೆಯ ಸೆರೆಯನು ಬಿಡಿಸಿಕೊಂಡ ಸುಮವೊಂದದಕೆ

ಹಿತವೆನಿಪ ನೆಲೆಯೊಂದನರಸಿದಂತೆ

ಶ್ರಿತನಾಗಿಯಾ ವಿಭೀಷಣ ನಿಂತ ರಾಮನಿಗೆ

ಜೊತೆಯಾಗಿ ಜನಕಜಾತೆಯ ವಿಮೋಚನೆಕೆ

ರಾಮನು ಹನುಮಂತನನ್ನು ಸಂಧಿಸಿದ ಪ್ರಸಂಗ -

ಜಲಧಿ ಜಲಧಿಯ ಮುಂದೆ ಗಗನ ಗಗನದ ಮುಂದೆ

ಮಲೆಗೆದುರುಮಲೆಯವೋಲೆದುರಾದರವರು

ಸಲೆ ಮುಕುರವೆರಡೆದುರು ಬರಲಪರಿಮಿತಬಿಂಬ

ಗಳು ಮೂಡುವಂತಿತ್ತವರ ಕಂಗಳು

ಈ ಕೃತಿಯನ್ನು ನಾಡಿನ ಪ್ರಸಿದ್ಧ ವಿದ್ವಾಂಸರಾದ ಶತಾವಧಾನಿ ಆರ್ ಗಣೇಶ್ ಹಾಗೂ ಡಾ. ರಾಮಕೃಷ್ಣ ಪೆಜತ್ತಾಯರು ಪ್ರಕಾಶನಕ್ಕೆ ಮೊದಲು ಪರಿಶೀಲಿಸಿ ಸೂಕ್ತವಾದ ತಿದ್ದುಪಡಿಗಳನ್ನು ಸೂಚಿಸಿದ್ದಾರೆ ಎಂದು ಕವಿ ಕೃತಜ್ಞತಾಪೂರ್ವಕವಾಗಿ ನುಡಿದಿದ್ದಾರೆ. ಕೇಶವಚಂದ್ರ, ಹೆದ್ದಾರಿ ರವಿಕುಮಾರ್, ಚಂದನ್ ಮುಂತಾದ ಕಾವ್ಯಾಸಕ್ತರೂ ಈ ಕಾವ್ಯವನ್ನು ಪರಿಶೀಲಿಸಿದ್ದಾರೆ. ಎಲ್ಲ ನೂರನಲವತ್ತೈದು ಪದ್ಯಗಳಲ್ಲೂ ರಸವತ್ತಾದ ಭಾವವಿದೆ, ರಮಣೀಯವಾದ ಪ್ರಾಸವಿದೆ, ಸುಂದರವಾದ ಅಲಂಕಾರವಿದೆ. ಪ್ರತಿಮಾಲೆಯನ್ನು ಪರೀಕ್ಷಿಸಿದರಷ್ಟ್ಟೇ ಪ್ರತಿಮಾಲಾಕ್ರಮದಲ್ಲಿ ಈ ಕಾವ್ಯವಿದೆ ಎಂಬುವುದು ತಿಳಿದು ಬರುತ್ತದೆಯೇ ಹೊರತಾಗಿ ಪ್ರತಿಮಾಲೆಯನ್ನು ಬಲವಾಗಿ ತುರುಕಿಸಿದ್ದು ಕಂಡುಬಂದಿಲ್ಲ. ಸಹೃದಯರು ಈ ಕಾವ್ಯವನ್ನು ಓದಿದಾಗ ವಿಶಿಷ್ಟ ಅನುಭೂತಿ ಪಡೆಯುವುದರಲ್ಲಿ ಸಂದೇಹವಿಲ್ಲ.

ಆಸಕ್ತರು ಗೂಗಲ್ ಪ್ಲೇ ಬುಕ್ ನಲ್ಲಿ  ಗ್ರಂಥವನ್ನು ಓದಬಹುದು. ಲಿಂಕ್ –

https://play.google.com/store/books/details?id=TYj1EQAAQBAJ   

ವಾಚಕರು ಅನಿಸಿಕೆಗಳನ್ನು ಲೇಖಕರಿಗೆ ತಿಳಿಸಲು ಇಮೇಲ್ ವಿಳಾಸ - chetansridu@gmail.com

ಶನಿವಾರ, ಸೆಪ್ಟೆಂಬರ್ 5, 2026

राधाकृष्णो महागुरुः (अष्टकम्)

 IIAS-शिम्लास्थस्य कस्यचित् निर्देशनानुसारं राधाकृषणन् वर्यस्य विषये रचितम् अष्टकम्

 


तत्त्वज्ञानविशालाब्धिलीलातरणपण्डितः ।

व्यराजद्भारते पूर्वं राधाकृष्णो महागुरुः ।। १ ।।

राधाकृष्णवर्यः महातत्त्वज्ञः आसीत् इति अस्य श्लोकस्य पृष्ठभूमिका ।

 

यमाश्रित्य महीशूरकाश्यादिषु सरस्वती ।

व्यजृम्भत स भाति स्म राधाकृष्णो महागुरुः ।। २ ।।

मैसूरुविश्वविद्यालये बनारस्-हिन्दूविश्वविद्यालये च राधाकृष्णः अध्यापनम् अकरोत् इति श्लोकस्य पृष्ठभूमिका ।

 

राजदूतपदे स्थित्वा सर्वशान्त्यै श्रमं व्यधात् ।

विश्वे भारतकीर्त्यै च राधाकृष्णो महागुरुः ।। ३ ।।

भारतस्य राजदूतत्वेन कार्यं निरूह्य विश्वशान्त्यै राधाकृष्णः प्रयत्त्वान् इति श्लोकस्य पृष्ठभूमिका ।

 

राष्ट्राध्यक्षेषु दक्षोऽयमिति योऽद्यापि गीयते ।

भारते सज्जनैर्नित्यं राधाकृष्णो महागुरुः ।। ४ ।।

राधाकृष्णः राष्ट्रपतिपदे आसीत् इति श्लोकस्य पृष्ठभूमिका ।

 

ग्रन्थाज्ज्ञानं ततस्तोषः पठतेति सदा वदन् ।

ज्ञानज्योतिर्नृहृद्दीपे राधाकृष्णो महागुरुः ।। ५ ।।

सर्वेऽपि अध्ययनं सम्यक् कुर्युः इति राधाकृष्णः वदति स्म इति श्लोकस्य पृष्ठभूमिका ।

 

प्राचीननूत्नऋषिभिर्भारतीयैर्यदीरितम् ।

अलेखीत्तद्विमर्शं च राधाकृष्णो महागुरुः ।। ६ ।।

तत्त्वशास्त्रविमर्शग्रन्थान् राधाकृष्णः अरचयत् इति श्लोकस्य पृष्ठभूमिका ।


राष्ट्राध्यक्षगृहं शिम्लास्थितमुन्नतशिक्षणे ।

स्तम्भं व्यधात् स भातीह राधाकृष्णो महागुरुः ।। ७ ।।

शिम्लास्थं राष्ट्रपतिभवनम् IIAS निर्माणार्थम् राधाकृष्णः अददात् इति श्लोकस्य पृष्ठभूमिका ।

 

मितभाष्यमितभाषी च च्छात्राब्जानां दिवाकरः ।

राजते शिक्षकश्रेष्ठो राधाकृष्णो महागुरुः ।। ८ ।।

यद्यपि राधाकृष्णः मितं भाषते स्म तथापि बह्वीः भाषाः जानाति स्म इति श्लोकस्य पृष्ठभूमिका ।

 

 


ಶುಕ್ರವಾರ, ನವೆಂಬರ್ 7, 2025

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥

ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯಣ ಕತೆ ಕೇಳಿದವರ ಪಾಪಗಳು ತೊಳೆದು ಹೋಗುವುದರಿಂದ ರಾಮಾಯಣವನ್ನು ಗಂಗೆಗೆ ಹೋಲಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಗಂಗೆ ಪಾಪಗಳನ್ನು ತೊಳೆಯಬೇಕಾದರೆ ನಾವು ಗಂಗೆಯಲ್ಲಿ ಇಳಿಯಬೇಕು. ಆದರೆ ರಾಮಾಯಣದ ವಿಚಾರದಲ್ಲಿ ಹಾಗಲ್ಲ. ರಾಮಾಯಣ ಪಾಪವನ್ನು ತೊಳೆಯಬೇಕಾದರೆ ರಾಮಾಯಣವೇ ನಮ್ಮೊಳಗೆ ಇಳಿಯಬೇಕು. 

ಸಾಮಾನ್ಯವಾಗಿ ರಾಮಾಯಣದ ಕತೆ ಭಾರತೀಯರೆಲ್ಲರಿಗೂ ತಿಳಿದಿದೆ. ಅತಿ ಹೆಚ್ಚು ಪಾಶ್ಚಾತ್ಯ ಜೀವನ ಶೈಲಿಗೆ ಒಗ್ಗಿಕೊಂಡ ಕೆಲವರಿಗೆ ರಾಮಾಯಣ ತಿಳಿದಿರಲಿಕ್ಕಿಲ್ಲ. ಅಂತಹವರೂ ಇಂದು ತಮ್ಮ ಮಕ್ಕಳಿಗೆ ರಾಮಾಯಣವನ್ನು ಕಲಿಸುವ ಪ್ರಯತ್ನ ಮಾಡುತ್ತಿರುವುದೂ ಕಂಡುಬರುತ್ತಿದೆ. ಅಯೋಧ್ಯೆಯ ರಾಮಮಂದಿರದ ಪುನರ್ನಿರ್ಮಾಣದ ನಂತರವಂತೂ ರಾಮನ ಕುರಿತಾದ ಭಕ್ತಿ ಜನರಲ್ಲಿ ಹೆಚ್ಚುತ್ತಿದೆ.

ಅನೇಕ ಕವಿಗಳು ವಿವಿಧ ಭಾಷೆಗಳಲ್ಲಿ ರಾಮಾಯಣವನ್ನು ಬರೆದಿದ್ದಾರೆ. ಅದರ ಕಥಾಭಾಗದಲ್ಲಿ ಸಣ್ಣ ಸಣ್ಣ ವ್ಯತ್ಯಾಸಗಳೂ ಇವೆ. ಇವೆಲ್ಲದಕ್ಕೂ ಮೂಲ ವಾಲ್ಮೀಕಿ ಮಹರ್ಷಿಗಳು ಬರೆದ ರಾಮಾಯಣ. ಸುಮಾರು ಇಪ್ಪತ್ತನಾಲ್ಕುಸಾವಿರ ಶ್ಲೋಕಗಳಿರುವ ರಾಮಾಯಣವನ್ನು ಸಾಮಾನ್ಯವೇಗದಲ್ಲಿ ನಿರಂತರವಾಗಿ ಓದಿದರೆ ಸುಮಾರು ಅರವತ್ತು ಘಂಟೆಗಳಷ್ಟು ಸಮಯದಲ್ಲಿ ಓದಬಹುದು. ರಾಮಾಯಣ ಕಥೆ ಗೊತ್ತಿರುವವರು ಹಾಗೂ ಸಾಮಾನ್ಯ ಶ್ಲೋಕಗಳ ಉಚ್ಚಾರಣೆಯ ಅಭ್ಯಾಸವಿರುವವರು ಸರಾಗವಾಗಿ ರಾಮಾಯಣದ ಪಾರಾಯಣ ಮಾಡಬಹುದು.

ರಾಮಾಯಣ ಜಗತ್ತಿನ ಆದಿಕಾವ್ಯ. ಆದರೆ ಅನೇಕ ಸಂಸ್ಕೃತ ವಿಶ್ವವಿದ್ಯಾಲಯಗಳ  ಪಾಠ್ಯಕ್ರಮದಲ್ಲಿ ರಾಮಾಯಣದ ಶ್ಲೋಕಗಳನ್ನು ಅಳವಡಿಸಲಾಗಿಲ್ಲ. ಸ್ಪಲ್ಪ ಪ್ರೌಢವಾದ ಬೇರೆ ಕಾವ್ಯಗಳನ್ನು ಓದಿದ ವಿದ್ಯಾರ್ಥಿಗಳು ರಾಮಾಯಣವನ್ನು ಸುಲಭವಾಗಿ ಓದಬಹುದು ಎಂಬ ಕಾರಣದಿಂದ ರಾಮಾಯಣವನ್ನು ಪಾಠ್ಯಕ್ರಮದಲ್ಲಿ ಇಟ್ಟಿರಲಿಕ್ಕಿಲ್ಲ ಎಂಬುವುದು ಅನೇಕರ ಊಹೆ. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದನ್ನೇ ಗುರಿಯಾಗಿಸಿಕೊಂಡಿರುವ ವಿದ್ಯಾರ್ಥಿಗಳು ರಾಮಾಯಣವನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಇಂತಹ ಮಹಾಕಾವ್ಯದ ಅಧ್ಯಯನವಾಗಬೇಕು ಎಂಬ ಆಸ್ಥೆಯಿಂದ 2016ರಲ್ಲಿ ಸಮಾನಮನಸ್ಕರಾದ ಕೆಲವು ವಿದ್ಯಾರ್ಥಿಗಳು ಸೇರಿ ಪ್ರತಿದಿನ ವಾಲ್ಮೀಕಿರಾಮಾಯಣ ಮಾಡುವುದಾಗಿ ನಿರ್ಧರಿಸಿದೆವು. ಸುಮಾರು 60 ದಿನಗಳ ಕಾಲ ಪ್ರತಿದಿನವೂ ಒಂದು ಗಂಟೆಯಂತೆ ರಾಮಾಯಣ ಪಾರಾಯಣ ನಡೆಯಿತು.

ತದನಂತರ 2019 ರಲ್ಲಿ ರಾಮಮಂದಿರದ ತೀರ್ಪು ಹೊರಬಿದ್ದ ಸಂತಸದಲ್ಲಿ ಬೆಂಗಳೂರಿನ ನಮ್ಮ ಕಛೇರಿಯಲ್ಲಿ ಅಖಂಡ ರಾಮಾಯಣ ಪಾರಾಯಣದ ಆಯೋಜನೆಯಾಯಿತು. ರಾಮಾಯಣ ಓದಲು ಸಾಮರ್ಥ್ಯವಿರುವ ಸುಮಾರು 30 ತಂಡಗಳನ್ನು ಗುರುತಿಸಿ ಅವರಿಗೆ ಎರಡು ಘಂಟೆಗಳ ಕಾಲಾವಧಿಯಲ್ಲಿ ಓದಬೇಕಾಗಿರುವ ಭಾಗವನ್ನು ನಿರ್ದೇಶಿಸಲಾಯಿತು. ಕಾರ್ಯಕ್ರಮದಲ್ಲಿ ಓದುತ್ತಿರುವ ತಂಡದ ವೇಗವನ್ನು ನಿಯಂತ್ರಿಸಿ ಕ್ಲೃಪ್ತ ಸಮಯದಲ್ಲಿ ಮುಗಿಯಬೇಕಾದಷ್ಟು ಅಧ್ಯಾಯಗಳನ್ನು ಮುಗಿಸಬೇಕಾದ ಜವಾಬ್ದಾರಿ ನನಗಿತ್ತು. ರಾತ್ರಿಯ ಕಾಲದ ಸಮಯ ನಿಯಂತ್ರಣವನ್ನು ನಾನು ನಿರ್ವಹಿಸುತ್ತಿದ್ದೆ.

ಆಮೇಲೆ 2023 ರಲ್ಲಿ ಬೆಂಗಳೂರಿನ 7 ಕಡೆಗಳಲ್ಲಿ 7 ಕಾಂಡಗಳ ಪಾರಾಯಣವನ್ನು ಪ್ರತಿ ಭಾನುವಾರವೂ ಆಯೋಜಿಸಲಾಯಿತು. ಸ್ಥಳೀಯ ಜನರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಯೋಗವೂ ನನ್ನದಾಗಿತ್ತು. ಶೃಂಗೇರಿ ಹಾಗೂ ಮಂಗಳೂರುಗಳಲ್ಲಿ ಅಖಂಡರಾಮಾಯಣ ಪಾರಾಯಣವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಸುದ್ದಿಯೂ ನನ್ನ ಕಿವಿಗೆ ಬಿದ್ದಿತ್ತು.

ಹೀಗೆ ಅನೇಕ ಕಡೆಗಳಲ್ಲಿ ವಾಲ್ಮೀಕಿರಾಮಾಯಣ ಪಾರಾಯಣಗಳಲ್ಲಿ ಸಕ್ರಿಯವಾಗಿದ್ದ ನನಗೆ ನಮ್ಮ ಮನೆಯಲ್ಲೂ ಪಾರಾಯಣ ಮಾಡಬೇಕು ಎಂದೆನಿಸಿತು. ಈ ಹಿಂದೆ 2024 ಹಾಗೂ 2025 ರಲ್ಲಿ ಹನುಮಜ್ಜಯಂತಿಯ ಹಿಂದಿನ ದಿನ ಸುಂದರಕಾಂಡದ ಪಾರಾಯಣವನ್ನೂ ನಾನು ಮಾಡಿದ್ದೆ. ಹೀಗೆ ನನ್ನ ಮನಸ್ಸಿನಲ್ಲಿ ಸುಪ್ತವಾಗಿದ್ದ ಕಲ್ಪನೆ 2025 ರ ಗಣೇಶ ಚತುರ್ಥಿಯ ಕಾಲದಲ್ಲಿ ಮೊಳಕೆಯೊಡೆಯಿತು.

ರಾಮಾಯಣ ಪಾರಾಯಣದ ವಿಧಿ, ಪ್ರತಿದಿನವೂ ಓದಬೇಕಾದ ಅಧ್ಯಾಯಗಳ ವಿಭಾಗ, ರಾಮಾಯಣ ಪಾರಾಯಣಕ್ಕೆ ಸೂಕ್ತ ಕಾಲ ಮುಂತಾದ ವಿವರಣೆಗಳೆಲ್ಲಾ ರಾಮಾಯಣ ಗ್ರಂಥದಲ್ಲಿದ್ದವು. ಪ್ರತಿದಿನವೂ 6-7 ಗಂಟೆಗಳ ಪಾರಾಯಣ ಮಾಡಬೇಕಾಗಿ ಬರುತ್ತದೆ ಎಂಬ ಅರಿವಿತ್ತು. ರಾಮಾಯಣ ಪಾರಾಯಣದ ಶ್ರೋತೃವಾಗಿ ಹನುಮಂತನನ್ನು ಪ್ರತಿಷ್ಠಾಪಿಸುವುದು, ರಾಮಪೂಜೆಗೆ ಕೋಸಂಬರಿ ಹಾಗೂ ಪಾನಗಳ ನೈವೇದ್ಯ ಮಾಡುವುದು ಮೊದಲಾದ ಕ್ರಮಗಳಂತೂ ಜಗತ್ಪ್ರಸಿದ್ಧ. ಆದ್ದರಿಂದ ಪ್ರತಿದಿನ ಬೆಳಗ್ಗೆ ಪಾರಾಯಣ ಆರಂಭಿಸಿ ಸಂಜೆಯ ಕಾಲಕ್ಕೆ ಕೆಲವು ಅಧ್ಯಾಯಗಳನ್ನು ಉಳಿಸಿಕೊಂಡು ಸಂಜೆ 6 ಗಂಟೆಗೆ ಮುಗಿಯುವಂತೆ ಪಾರಾಯಣ ಮಾಡಿ ರಾಮನಿಗೆ ಮಂಗಳಾರತಿ ಮಾಡುವುದು. ಕೋಸಂಬರಿ-ಪಾನಕಗಳ ನೈವೇದ್ಯ ಮಾಡಿ ಸುತ್ತಮುತ್ತಲಿನ ಹತ್ತಿಪ್ಪತ್ತು ಜನರನ್ನು ಕರೆದು ಹಂಚುವುದು ಎಂಬ ಯೋಚನೆಯಿತ್ತು.

ಮನೆಯ ಹಿರಿಯರೊಂದಿಗೆ ಈ ಯೋಚನೆಯನ್ನು ತಿಳಿಸಿದಾಗ ಪಾರಾಯಣಕ್ಕೆ ಸಂತಸದಿಂದಲೇ ಸಮ್ಮತಿಸಿದರು. ಆದರೆ ಪಾನಕ-ಕೋಸಂಬರಿ ಮಾತ್ರ ಹಂಚುವ ಯೋಜನೆಗೆ ಸಮ್ಮತಿಯಿರಲಿಲ್ಲ. ಇಂತಹ ಅಪರೂಪದ ಕಾರ್ಯಕ್ರಮವನ್ನು ಸ್ವಲ್ಪಮಟ್ಟಿದೆ ವಿಜೃಂಭಣೆಯಿಂದಲೇ ಮಾಡಬೇಕು ಎಂಬುವುದು ಮನೆಯ ಸದಸ್ಯರ ಅಭಿಪ್ರಾಯವಾಗಿತ್ತು. ವಿಶಿಷ್ಟ ಕಾರ್ಯಕ್ರಮವಾದ್ದರಿಂದ ನೆರೆಕರೆಯವರನ್ನೂ ಬಂಧು ಮಿತ್ರರನ್ನೂ ಕರೆದರೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಆದ್ದರಿಂದ ಪ್ರತಿದಿನ ಮಧ್ಯಾಹ್ನವೇ ಮಹಾಮಂಗಳಾರತಿ ಮಾಡಿ ಬಂದವರಿಗೆಲ್ಲರಿಗೂ ಊಟದ ವ್ಯವಸ್ಥೆ ಮಾಡುವುದು ಸೂಕ್ತ ಎಂಬ ನಿರ್ಣಯವಾಯಿತು.  ಒಂಭತ್ತು ದಿನಗಳ ಕಾರ್ಯಕ್ರಮವಾದುದರಿಂದ ಪ್ರತಿದಿನವೂ ಮರುದಿನದ ತಯಾರಿಗಳೂ ನಡೆಯಬೇಕು. ಆದುದರಿಂದ ರಾತ್ರಿ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳದೇ ಭಜನೆ ಹಾಗೂ ರಾಮನಿಗೆ ಪಂಚೋಪಚಾರ ಪೂಜೆಯನ್ನಷ್ಟೇ ಮಾಡುವುದು ಎಂದ ತೀರ್ಮಾನಿಸಲಾಯಿತು. ದೀಪಾವಳಿಯ ನಂತರ ಕಾರ್ತಿಕ ಪಂಚಮಿಯಿಂದ ತ್ರಯೋದಶಿಯವರೆಗೆ (26.10.2025 ರಿಂದ 03.11.2025) ಕಾರ್ಯಕ್ರಮ ನಡೆಸುವುದಾಗಿ ದಿನಾಂಕವನ್ನೂ ನಿರ್ಧರಿಸಲಾಯಿತು.

ರಾಮಾಯಣದ ಕುರಿತಾದ ಉಪನ್ಯಾಸಗಳನ್ನು ಯೋಜಿಸಿದರೆ ಕಾರ್ಯಕ್ರಮ ಇನ್ನೂ ಉತ್ತಮವಾಗಬಹುದು ಎಂಬ ಅಭಿಪ್ರಾಯವೂ ಬಂದಿತು. ಜನರೆಲ್ಲ ಸಭಾ ಕಾರ್ಯಕ್ರಮಗಳನ್ನು ನೋಡಿ ನೋಡಿ ರೋಸಿ ಹೋಗಿರುವುದರಿಂದ ಉಪನ್ಯಾಸಕರ ಪರಿಚಯ, ಒಂದು ರಾಮಭಜನೆ, ಕೊನೆಯಲ್ಲಿ ಉಪನ್ಯಾಸಕರಿಗೆ ಸನ್ಮಾನ ಇವಿಷ್ಟು ಕಾರ್ಯಕ್ರಮಗಳು 50 ನಿಮಿಷಗಳಲ್ಲಿ ಮುಗಿಯುವಂತೆ ಉಪನ್ಯಾಸಗಳನ್ನು ಪ್ರತಿದಿನವೂ ಯೋಜಿಸಲಾಯಿತು. ಉಪನ್ಯಾಸಕರನ್ನು ಜೋಡಿಸುವುದಕ್ಕೆ ಎರಡು ತಿಂಗಳುಗಳ ಸಮಯವಿದ್ದುದರಿಂದ ವಿದ್ವಾಂಸರ ಸಂಪರ್ಕವನ್ನಾರಂಭಿಸಿದೆ. ಹೆಚ್ಚು ಕಷ್ಟವಿಲ್ಲದೇ ವಿದ್ವಾಂಸರು ಬರಲು ಒಪ್ಪಿದರು. ರಾಮಾಯಣದ ಕತೆ ಎಲ್ಲರಿಗೂ ಗೊತ್ತಿರುವುದರಿಂದ ಕೆಲವೊಂದಿಷ್ಟು ನಿರ್ದಿಷ್ಟ ವಿಷಯಗಳನ್ನು ಸೂಚಿಸಲಾಯಿತು. ಆ ವಿಷಯಗಳನ್ನು ಆಶ್ರಯಿಸಿ ವಿದ್ವಾಂಸರ ವ್ಯಾಖ್ಯಾನವಾಯಿತು. ವಿಷಯಗಳು ಈ ಕೆಳಕಂಡಂತಿವೆ.


ದಿನಾಂಕ

ವಿಷಯ

ವ್ಯಾಖ್ಯಾನಕಾರರು

26.10.2025
ಭಾನುವಾರ

ಕಾರ್ಯಸಾಧಕ ಹನುಮಂತ

ಶ್ರೀ. ರವಿಶಂಕರ ಭಟ್ಟ
ತಂತ್ರಜ್ಞಾನ ಸಹಾಯಕರು, ಶೃಂಗೇರಿ

27.10.2025
ಸೋಮವಾರ

ರಾಮಾಯಣದ ಹೃದಯ ಅಯೋಧ್ಯಾಕಾಂಡ

ಶ್ರೀ ಉಮಾಮಹೇಶ್ವರ
ರಾಮಾಯಣ ವಿದ್ವಾಂಸರು, ಬೆಂಗಳೂರು

28.10.2025
ಮಂಗಳವಾರ

ಲಕ್ಷ್ಮಣ ಹಾಗೂ ಭರತ

ಶ್ರೀ ಮಹೇಶ ಕಾಕತ್ಕರ್
ಉಪನ್ಯಾಸಕರು, ಶೃಂಗೇರಿ

29.10.2025
ಬುಧವಾರ

ರಾವಣನಿಗೆ ಉಪದೇಶಗಳು

ಶ್ರೀ. ದಿನಕರ ಗೋಖಲೆ
ಯಕ್ಷಗಾನ ಕಲಾವಿದರು, ದರ್ಭೆತಡ್ಕ

30.10.2025
ಗುರುವಾರ

ರಾಮಾಯಣದಲ್ಲಿ ಜೀವನಪ್ರೀತಿ

ಶ್ರೀ. ರಾಘವೇಂದ್ರ ಭಟ್ಟ
ಉಪನ್ಯಾಸಕರು, ಶೃಂಗೇರಿ

31.10.2025
ಶುಕ್ರವಾರ

ರಾಮನ ಆದರ್ಶ ಗುಣಗಳು

ಶ್ರೀಮತೀ ಪ್ರತಿಭಾ
ಗೃಹಿಣಿ, ಬೆಂಗಳೂರು

01.11.2025
ಶನಿವಾರ

ಕಷ್ಟಸಹಿಷ್ಣು ರಾಮ

ಶ್ರೀ. ಪದ್ಮನಾಭ ಮರಾಠೆ
ಉಪನ್ಯಾಸಕರು, ಕಟೀಲು

02.11.2025
ಭಾನುವಾರ

ಲೋಕಮಾತೆ ಸೀತೆ

ಶ್ರೀ ವೆಂಕಟೇಶ ಕುಮಾರ
ಶಿಕ್ಷಕರು, ಸುಳ್ಯ

03.11.2025
ಸೋಮವಾರ

ರಾಮಾಯಣದ ಮಹತ್ತ್ವ

ಶ್ರೀ. ಟಿ. ಎನ್. ಪ್ರಭಾಕರ
ಸಂಸ್ಕೃತ ವಿದ್ವಾಂಸರು, ಮೈಸೂರು


25.10.2025 ರಂದು ಪುಣ್ಯಾಹವಾಚನ ಹಾಗೂ ಗಣಹವನದೊಂದಿಗೆ ಕಾರ್ಯಕ್ರಮದ ಆರಂಭವಾಯಿತು. ಆದಿನ ರಾಮಾಯಣದ ಮಾಹಾತ್ಮ್ಯದ ಪಾರಾಯಣ ಮಾಡಲಾಯಿತು. ಮೊದಲೇ ಸಿದ್ಧವಾಗಿದ್ದ ಮಂಟಪದಲ್ಲಿ ಪುಸ್ತಕಗಳನ್ನು ಸ್ಥಾಪಿಸಲಾಯಿತು. ನಮ್ಮ ಮನೆಯಲ್ಲಿದ್ದ 3 ಸೆಟ್ ಪುಸ್ತಕಗಳು, ನಮ್ಮ ಊರಿನ ಪುರೋಹಿತರು ಕೊಟ್ಟಿದ್ದ 1 ಸೆಟ್ ಪುಸ್ತಕ, ನಾನು ಗ್ರಂಥಾಲಯದಿಂದ ತಂದಿದ್ದ 2 ಸೆಟ್ ಪುಸ್ತಕಗಳು, ದಾನ ಕೊಡಲು ಖರೀದಿಸಿದ್ದ 1 ಸೆಟ್ ಪುಸ್ತಕ ಹೀಗೆ ಒಟ್ಟು 7 ಸೆಟ್ ಪುಸ್ತಕಗಳನ್ನು ಸ್ಥಾಪಿಸಲಾಯಿತು. ದೇವನಾಗರಿ ಲಿಪಿಯ ಒಂದೇ ಪುಸ್ತಕದಲ್ಲಿ ಇಡಿಯ ರಾಮಾಯಣ ಮುದ್ರಿತವಾಗಿತ್ತು. ಕನ್ನಡದ ಲಿಪಿಯ ಒಂದು ಸೆಟ್ ನಲ್ಲಿ ತಲಾ ಮೂರು ಪುಸ್ತಕಗಳಿದ್ದವು. ಮತ್ತೊಂದರಲ್ಲಿ 12 ಪುಸ್ತಕಗಳ ಎರಡು ಸೆಟ್ ಪುಸ್ತಗಳಿದ್ದವು. ಹೀಗೆ ಒಟ್ಟು 36 ಪುಸ್ತಕಗಳು ಮಂಟಪದಲ್ಲಿದ್ದವು. ಪುಸ್ತಕಗಳ ಹಿಂದ ರಾಮ-ಸೀತೆ-ಲಕ್ಷ್ಮಣ-ಹನುಮಂತರ ಚಿತ್ರ ಸ್ಥಾಪಿಸಲಾಯಿತು. ನಮ್ಮ ತೋಟದಲ್ಲಿ ನೆಲೆಯಾಗಿರುವ ಹನುಮಂತನ ಆವಾಹನೆಯನ್ನು ತೆಂಗಿನಕಾಯಿಯಲ್ಲಿ ಮಾಡಿ ಶ್ರೋತೃವಿನ ಪೀಠದಲ್ಲಿ ಕುಳ್ಳಿರಿಸಲಾಯಿತು. ಪುಣ್ಯಾಹವಾಚನದ ನಂತರ ರಾಮಾಯಣಮಾಹಾತ್ಮ್ಯ ಓದಲಾಯಿತು.

ಮರುದಿನದಿಂದ ಪ್ರತಿದಿನವೂ ಬೆಳಗ್ಗೆ ರಾಮಾಯಣ ಗ್ರಂಥಗಳಿಗೆ ಪಂಚೋಪಚಾರ ಪೂಜೆ ಹಾಗೂ ರಾಮತಾರಕ ಜಪದ ನಂತರ 5.30 ಕ್ಕೆ ಪಾರಾಯಣದ ಆರಂಭವಾಗುತ್ತಿತ್ತು. ಮಧ್ಯದಲ್ಲಿ ಪಾನೀಯ ಹಾಗೂ ತಿಂಡಿಗೆ ಎರಡು ಸಣ್ಣ ವಿರಾಮಗಳನ್ನು ಕೊಟ್ಟು 11.30 ಕ್ಕೆ ಮುಗಿಯುವಂತೆ ಪಾರಾಯಣ ಮಾಡಲಾಗುತ್ತಿತ್ತು. ಒಂದೆರಡು ದಿನ 11.30 ಕ್ಕೆ ಆ ದಿನದ ಭಾಗ ಮುಗಿಯದಾಗ ರಾತ್ರಿ ಪೂಜೆಯ ಮೊದಲು ಉಳಿದ ಭಾಗವನ್ನು ಓದಲಾಯಿತು. 11.30 ಕ್ಕೆ ಆರಂಭಿಸಿ ನೈವೇದ್ಯ ಹಾಗೂ ಮಂಗಳಾರತಿ  ಮಾಡಲಾಗುತ್ತಿತ್ತು. ಮಂಗಳಾರತಿಯ ಆರಂಭದಲ್ಲಿ ತುಪ್ಪದ ದೀಪಗಳನ್ನು ಹೆಂಗಸರು ಎತ್ತುತ್ತಿದ್ದರು. ಮಂಗಳಾರತಿಯ ನಂತರ ವೈದಿಕರ ಪೂಜೆ ನಡೆದು ತದನಂತರ ವ್ಯಾಖ್ಯಾನ ನಡೆಯುತ್ತಿತ್ತು. ವ್ಯಾಖ್ಯಾನದ ನಂತರ ಪ್ರಸಾದ ವಿತರಣೆ ನಡೆಯುತ್ತಿತ್ತು. ಪಂಚಗಜ್ಜಾಯದ ಪ್ಯಾಕೆಟ್-ಗಳನ್ನು ಹೂವಿನ ಪ್ರಸಾದದೊಂದಿಗೆ ಎಲ್ಲರಿಗೂ ವಿತರಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳೂ ನಡೆದು ಪ್ರತಿದಿನವೂ ಮಧ್ಯಾಹ್ನ 1.00 – 1.15 ರ ಒಳಗೆ ಮೊದಲನೇ ಪಂಕ್ತಿಯ ಊಟ ಆರಂಭವಾಗುತ್ತಿತ್ತು. ಪ್ರತಿದಿನ ಸಂಜೆ ಭಜನೆ ಹಾಗೂ ಪಂಚೋಪಚಾರ ಪೂಜೆ ನಡೆಲಾಗುತ್ತಿತ್ತು. 02.10.2025 ಏಕಾದಶಿಯಂದು ನಮ್ಮೂರಿನ ಭಜನಾ ಮಂಡಳಿಯವರು ಉಪಸ್ಥಿತರಿದ್ದು ಸುಮಾರು ಎರಡು ಗಂಟೆಗಳ ಕಾಲ ಭಜನೆ ಸೇವೆ ನಡೆಸಿದರು.

ಒಂದು ಕಾರ್ಯಕ್ರಮವನ್ನು ತಾವೇ ಮುತುವರ್ಜಿ ವಹಿಸಿಕೊಂಡು ನಡೆಸುವಾಗ ಆತಂಕಗಳಾಗುವುದು ಸಹಜ. ನಮ್ಮ ಮನೆಯವರೆಲ್ಲರಿಗೂ ಮೊದಲ ದಿನದಿಂದಲೇ ಇಂತಹ ಆತಂಕಗಳಿತ್ತು. ಆದರೆ ಕ್ರಮೇಣ ಊರಿನ ಜನರ ಹಾಗೂ ಬಂಧು ಬಾಂಧವರ ಸಹಕಾರದಿಂದ ಆತಂಕ ಕಡಿಮೆಯಾಗತೊಡಗಿತು. ಪಾರಾಯಣ ಆರಂಭದ ಹಿಂದಿನ ದಿನವೇ ಊರಿನ ಉತ್ಸಾಹಿ ತರುಣರ ತಂಡದವರು ಬಂದು ಅಲಂಕಾರಗಳನ್ನು ಮಾಡಿದರು. ಊರಿನ ಜನರು ಬಾಳೆಗೊನೆ, ಬಾಳೆಎಲೆ, ತೆಂಗಿನಕಾಯಿ ಹಾಗೂ ಕೆಲವೊಂದಿಷ್ಟು ದಿನಸಿ ಸಾಮಾನುಗಳನ್ನೂ ತಂದು ಕೊಟ್ಟರು. ಕೆಲವರು ಸ್ವೀಟಿನ ಪ್ರಾಯೋಜಕತ್ವವನ್ನು ವಹಿಸಿಕೊಂಡರು. ಕೆಲವು ಹೆಂಗಸರು ಬೇಗ ಬಂದು ಹೂವು ಕಟ್ಟುವುದು, ಆರತಿಯ ಅಲಂಕಾರ ಮುಂತಾದ ಕೆಲಸಗಳಲ್ಲಿ ಸಹಕರಿಸಿದರು. ತರಕಾರಿ ಹೆಚ್ಚುವುದು ಬಡಿಸುವುದು ಮೊದಲಾದ ಜವಾಬ್ದಾರಿಗಳನ್ನು ಊರಿನ ಜನರೇ ವಹಿಸಿಕೊಂಡು ಪರಸ್ಪರ ಸಮಾಲೋಚನೆ ನಡೆಸಿ ಪಾಳಿಯಂತೆ ನಿರ್ವಹಿಸಿದರು. ವ್ಯಾಖ್ಯಾನದ ಮೊದಲು ಭಜನೆ ಹಾಡುವುದರ ಮೂಲಕ ವ್ಯಾಖ್ಯಾನದ ಪ್ರಭಾವ ಹೆಚ್ಚಿಸಬೇಕು ಎಂದು ಕೇಳಿಕೊಂಡ ತತ್ಕ್ಷಣ ಸಂತೋಷದಿಂದ ಒಪ್ಪಿ ಭಜನೆ ಹಾಡಿದರು. ಹಳ್ಳಿಗಳೆಂದರೆ ವೃದ್ಧಾಶ್ರಮದಂತಾಗಿರುವ ಸ್ಥಿತಿಯಲ್ಲೂ ಇಂತಹ ಕಾರ್ಯಕ್ರಮದಲ್ಲಿ ಜನರೆಲ್ಲರೂ ಉತ್ಸಾಹದಿಂದ ಭಾಗವಹಿಸಿದ್ದು ಎಲ್ಲರಿಗೂ ಆಶ್ಚರ್ಯವಾಗಿತ್ತು. ಕೆಲವು ಬಂಧುಗಳು ಒಂದೆರಡು ದಿನ ನಮ್ಮ ಮನೆಯಲ್ಲೇ ವಾಸವಿದ್ದು ಎಲ್ಲಾ ಕೆಲಸಗಳಲ್ಲೂ ಸಹಕರಿಸಿದರು.

ಮಂಗಳೂರಿನ ಅಜ್ಜ ಕಾರ್ಯಕ್ರಮ ನಡೆಯುವಾಗ ಅಷ್ಟೂ ದಿನಗಳೂ ಜತೆಯಾಗಿದ್ದರು. ಅಜ್ಜಿ ಚುರುಕಾಗಿ ಓಡಾಡುತ್ತಾ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದರು. ನನ್ನ ಚಿಕ್ಕಮ್ಮ ಹಾಗೂ ಹೆಂಡತಿ ಪ್ರತಿದಿನವೂ ಅಡುಗೆಯ ಕುರಿತಾಗಿ ಗಮನ ಹರಿಸುವುದರ ಜೊತೆ ಪೂಜೆಯ ತಯಾರಿ, ಅಲಂಕಾರ, ರಂಗೋಲಿ, ಅತಿಥಿಸತ್ಕಾರ ಮುಂತಾದ ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದರು. ಅಪ್ಪ ಪೂಜೆಯ ತಯಾರಿ ನೋಡಿಕೊಂಡರೆ ಚಿಕ್ಕಪ್ಪ ಅಡುಗೆ ಊಟ ಮುಂತಾದ ವಿಷಯಗಳಲ್ಲಿ ಗಮನವಹಿಸುತ್ತಿದ್ದರು. ನನ್ನ ತಮ್ಮ ದೂರದೂರಿನಿಂದ ಬರುವವರನ್ನು ಕರೆತರುವ ವ್ಯವಸ್ಥೆ, ಛಾಯಾಚಿತ್ರ ತೆಗೆಯುವುದು ಮುಂತಾದುವುಗಳನ್ನು ಮಾಡುತ್ತಿದ್ದ. ಅಡುಗೆಯ ಜವಾಬ್ದಾರಿ ವಹಿಸಿಕೊಂಡಿದ್ದ ದಿನೇಶ ಅಭ್ಯಂಕರ್ ಹಾಗೂ ಸೀತಾರಾಮ ತಾಮ್ಹಣ್ಕರ್ ರುಚಿಯಾದ ಅಡುಗೆಯನ್ನು ಮಾಡುತ್ತಿದ್ದರು. ಪ್ರತಿದಿನವೂ ಎಷ್ಟು ಜನ ಆಗಮಿಸಬಹುದು ಎಂದು ನಿಖರವಾಗಿ ಊಹಿಸುವುದು ಕಷ್ಚಸಾಧ್ಯವಾಗಿತ್ತು. ಅದಾಗ್ಯೂ ಸಾಮಾನ್ಯವಾಗಿ ಯಾವ ದಿನವೂ ಅಡುಗೆ ಎಸೆದು ಹಾಳುಮಾಡುವಷ್ಟು ಉಳಿಯಲಿಲ್ಲ. ಕಡಿಮೆಯೂ ಆಗಲಿಲ್ಲ.

ಬಂಧುವೊಬ್ಬರು 9 ದಿನಗಳ ಪಾರಾಯಣದಲ್ಲಿ ಎಂಟು ದಿನವೂ ಉಪಸ್ಥಿತರಿದ್ದರು. ಮನೆ ತುಂಬಾ ದೂರವಿದ್ದರೂ ನಾಲ್ಕೈದು ದಿನಗಳ ಕಾಲ ಊರಿನ ಅನೇಕರು ತಮ್ಮ ಮನೆಯ ಸಮಸ್ಯೆಗಳನ್ನೂ, ಆರೋಗ್ಯ ಬಾಧೆಯನ್ನೂ, ವಯಸ್ಸನ್ನೂ ಲೆಕ್ಕಿಸದೆ ಉಪಸ್ಥಿತರಿದ್ದರು. ಕೆಲವರಂತೂ ಮುಂಜಾನೆ ಕೆಲಸದಲ್ಲಿ ಸಹಾಯ ಮಾಡಲು, ವ್ಯಾಖ್ಯಾನ ಕೇಳಲು ಮಧ್ಯಾಹ್ನ ಹೀಗೆ ಎರಡೆರಡು ಬಾರಿಯೂ ಬರುತ್ತಿದ್ದರು. ದೂರದ ಬೆಂಗಳೂರು ಮುಂತಾದ ಊರುಗಳಿಂದಲೂ ಉಪಸ್ಥಿತರಿದ್ದ ಜನ ಪಾರಾಯಣದಲ್ಲಿ ಭಾಗವಹಿಸಿದರು.

ಪ್ರತಿದಿನವೂ ಪಾರಾಯಣಕ್ಕೆ ಮೊದಲು ಆ ದಿನದ ಭಾಗವಿರುವ ಪುಸ್ತಕಗಳನ್ನು ನಾನು ಮಂಟಪದಿಂದ ತೆಗೆದಿರಿಸಲಾಗುತ್ತಿತ್ತು. ಶ್ರೋತೃಗಳಾಗಿ ಬಂದವರೂ ಪುಸ್ತಕವನ್ನು ನೋಡುತ್ತಾ ಪಾರಾಯಣ ಕೇಳಲು ಅನುಕೂಲವಾಗುತ್ತಿತ್ತು. ರಾಮಾಯಣ ಓದಿ ಅಭ್ಯಾಸವಿದ್ದವರು ಮುಖ್ಯ ವಕ್ತೃವಿನೊಂದಿಗೆ ದನಿಗೂಡಿಸುತ್ತಿದ್ದರು. ಪ್ರತಿದಿನವೂ ಕೊನೆಯ ಅಧ್ಯಾಯವನ್ನು ನಿಧಾನವಾಗಿ ಉಚ್ಚಸ್ವರದಲ್ಲಿ ಓದಲಾಗುತ್ತಿತ್ತು. ಇದರಿಂದ ಸುಮಾರು 7-8 ಜನ ಒಟ್ಟಾಗಿ ಕೊನೆಯ ಅಧ್ಯಾಯವನ್ನು ಓದುವುದು ಕಂಡುಬರುತ್ತಿತ್ತು.

ಪ್ರಥಮ ದಿನ 60, ಮುಂದಿನ ಮೂರು ದಿನಗಳ ಕಾಲ 35-40, ಐದು ಹಾಗೂ ಆರನೆಯ ದಿನ ಸುಮಾರು 60 ಕೊನೆಯ ಮೂರು ದಿನಗಳಲ್ಲಿ ಸುಮಾರು 100 ಕ್ಕಿಂತಲೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗಿಯಾದರು. 03.11.20225  ರಂದು ಕೊನೆಯ ದಿನ ಹನುಮಂತನನ್ನು ತೋಟದಲ್ಲಿ ಪುನಃ ಸ್ಥಾಪಿಸಿ ರಾಮಾಯಣ ಮಾಹಾತ್ಮ್ಯವನ್ನು ಓದುವುದರೊಂದಿಗೆ ರಾಮಾಯಣ ನವಾಹ ಸುಸಂಪನ್ನವಾಯಿತು.

(ಇಲ್ಲಿ ಸಹಕರಿಸಿದವರ ಹೆಸರನ್ನು ಉಲ್ಲೇಖಿಸಿದರೆ ಯಾರದ್ದಾದರೂ ಹೆಸರು ಬಿಟ್ಟು ಹೋಗುವುದು ಖಂಡಿತ. ಅಷ್ಟು ಜನ ಸಹಕಾರ ಮಾಡಿದ್ದಾರೆ. ಆದ್ದರಿಂದ ಯಾರ ಹೆಸರನ್ನೂ ಉಲ್ಲೇಖಿಸಲಿಲ್ಲ.)














ಸೋಮವಾರ, ಜೂನ್ 16, 2025

दत्तपदी (वृष्टिः अथवा यक्षगानम्)

 

15.06.2025 तमे दिनाङ्के उडुपिनगरे राजाङ्गणे वेङ्कटराम-ऐताळवर्यस्य संस्मरणकार्यक्रमाङ्गत्वेन आयोजिते डा. रामकृष्णपेजत्तायमहोदयस्य अष्टावधाने अहम् दत्तपदिविभागस्य पृच्छकः आसम् । तत्र मया हर, शिव, शङ्कर, शम्भु इत्येतानि पदानि विन्यस्य वृष्टिकालस्य अथवा यक्षगानस्य वर्णनं करणीयम् इति मया दत्तपदिविभागे प्रश्नः पृष्टः । अवधानिना रामकृष्णपेजत्तायवर्येण वृष्टिविषये पद्यं रचितम् । मया श्लेषानुप्राणितोपमालङ्कारं प्रयुज्य यक्षगानं वर्षणसदृशम् इति वर्णितम् । तद्यथा –


सन्तापनादिहरणं रसदृष्टिहेतु-

-रिन्द्रप्रभावजनितं निशि वल्गुनादम् ।

चापाशुगांशमनिशं करविप्रयोगं

स्याद्वर्षणेन सदृशम्भुवि यक्षगानम् ॥

 

पदच्छेदः – सन्तापनादिहरणं रसदृष्टिहेतुः इन्द्रप्रभावजनितं निशि वल्गुनादम् चापाशुगांशमनिशं करविप्रयोगं स्याद्वर्षणेन सदृशं भुवि यक्षगानम् ।

 

अन्वयः - सन्तापनादिहरणं रसदृष्टिहेतुः इन्द्रप्रभावजनितं निशि वल्गुनादम् चापाशुगांशमनिशं करविप्रयोगं वर्षणेन सदृशं यक्षगानं स्यात् ।

 

यक्षगानं वर्षणेन सदृशं स्यात् । कथं वर्षणेन सदृशम् ? इत्यत्र उक्ताः साधारणधर्माः वर्षणम् इत्यत्र, यक्षगानम् इत्यत्र अपि अन्वयं प्राप्नुवन्ति । तद्यथा –

 

पदम्

वर्षणपक्षे

यक्षगानपक्षे

सन्तापनादिहरणम्

सूर्यतापः धूलिः इत्यादीनां नाशकम्

मनसः तापः म्लानता इत्यादीनां नाशकं

रसदृष्टिहेतुः

जलदर्शने कारणम्

शृङ्गारादिरसानां दर्शने कारणम्

इन्द्रप्रभावजनितम्

वृष्टिदेवता इन्द्रः, तत्प्रभावेन जनितम्

नाट्यम् इन्द्रसभायां प्रथमं प्रवृत्तमिति शास्त्रं वदति । तथा च यक्षगानेऽपि सामान्यतः सर्वासु कथासु इन्द्रप्रभावोऽपि भवति ।

निशि वल्गुनादम्

रात्रौ हितकारिणं नादं बिभर्ति

रात्रौ यक्षगानं प्रवर्तते । तस्य नादः हितकरः भवति ।

चापाशुगांशम्

इन्द्रधनुषः, वायोः च अंशेन युक्तम्

धनुषः, बाणस्य च अंशेन युक्तम् । नाट्ये धनुः बाणश्च प्रदर्श्यते ।

अनिशम्

निरन्तरम्

निरन्तरम्

करविप्रयोगम्

सूर्यकिरणानां प्रयोगरहितम् । अन्धकारयुतम् इति तात्पर्यम् । अथवा कस्य जलस्य रवेः सूर्यस्य च प्रयोगः दर्शनं यत्र । वृष्टिकाले सूर्यस्य दर्शनं विरलम् इत्यभिप्रायः ।

अथवा कस्य जलस्य रवेः सूर्यस्य च प्रयोगः । कदाचित् वृष्टिः कदाचित् सूर्यः इत्यभिप्रायः ।

करस्य हस्तस्य विशिष्टप्रयोगः यत्र तादृशं यक्षगानम् ।

 

अत्र हरणम् इत्यत्र हर इति पदस्य, निशि वल्गुनादम् इत्यत्र शिव इति पदम्, अनिशं करविप्रयोगम् इत्यत्र शङ्कर इति पदम्, सदृशं भुवि इत्यत्र च शम्भु इति पदं च दृश्यते ।

 


15.06.2025 ರಂದು ಉಡುಪಿಯ ರಾಜಾಂಗಣದಲ್ಲಿ ವೆಂಕಟರಾಮ ಐತಾಳರ ಸಂಸ್ಮರಣೆಯ ಅಂಗವಾಗಿ ರಾಮಕೃಷ್ಣ ಪೆಜತ್ತಾಯರ ಅಷ್ಟಾವಧಾನ ಕಾರ್ಯಕ್ರಮ ನಡೆಯಿತು. ಅವದಾನದಲ್ಲಿ ನಾನು ದತ್ತಪದಿ ಪೃಚ್ಛಕನಾಗಿದ್ದೆ. ಹರ, ಶಿವ, ಶಂಕರ, ಶಂಭು ಎಂಬ ಪದಗಳನ್ನು ಬಳಸಿಕೊಂಡು ಮಳೆ ಅಥವಾ ಯಕ್ಷಗಾನದ ವರ್ಣನೆ ಮಾಡಬೇಕು ಎಂದು ಪ್ರಶ್ನೆ ಕೇಳಿದ್ದೆ. ಅವಧಾನಿಗಳು ಮಳೆಯನ್ನು ವರ್ಣಿಸಿದರು. ನಾನು ಯಕ್ಷಗಾನ ಮಳೆಯಂತೆ ಎಂದು ವರ್ಣಿಸಿ ಸಾಧಾರಣಧರ್ಮಗಳಾಗಿ ಶ್ಲೇಷಪೂರ್ಣಪದಗಳನ್ನು ಬಳಸಿದ್ದೆ. ಪದ್ಯ ಈ ಕೆಳಗಿನಂತಿದೆ.

 

ಸಂತಾಪನಾದಿಹರಣಂ ರಸದೃಷ್ಟಿಹೇತು

ರಿಂದ್ರಪ್ರಭಾವಜನಿತಂ ನಿಶಿ ವಲ್ಗುನಾದಮ್

ಚಾಪಾಶುಗಾಂಶಮನಿಶಂ ಕರವಿಪ್ರಯೋಗಂ

ಸ್ಯಾದ್ವರ್ಷಣೇನ ಸದೃಶಂ ಭುವಿ ಯಕ್ಷಗಾನಂ

 

ಪದ್ಯದ ಪದಚ್ಛೇದ ಹಾಗೂ ಅನ್ವಯಗಳನ್ನು ಮೇಲಿರುವ ಸಂಸ್ಕೃತ ಆವೃತ್ತಿಯಲ್ಲಿ ಕಾಣಬಹುದು. ಶ್ಲೇಷಯುಕ್ತ ಪದಗಳು ಹೀಗಿವೆ.

 

ಪದ

ಮಳೆ ಎಂಬ ಅರ್ಥದಲ್ಲಿ

ಯಕ್ಷಗಾನ ಎಂಬ ಅರ್ಥದಲ್ಲಿ

ಸಂತಾಪನಾದಿ ಹರಣಂ

ಸೂರ್ಯನ ಬಿಸಿಲು, ಧೂಳು ಮುಂತಾದುವುಗಳನ್ನು ನಾಶಮಾಡುವ

ಮನಸ್ಸಿನ ತಾಪಗಳನ್ನೂ, ಬೇಸರ ಮುಂತಾದುವುಗಳನ್ನೂ ದೂರಗೊಳಿಸುವ

ರಸದೃಷ್ಟಿಹೇತುಃ

ನೀರು ಕಾಣಿಸಿಕೊಳ್ಳಲು ಕಾರಣವಾಗುವ

ಶೃಂಗಾರಾದಿ ರಸಗಳನ್ನು ಕಾಣಲು ಕಾರಣವಾಗುವ

ಇಂದ್ರಪ್ರಭಾವಜನಿತಮ್

ಮಳೆಯ ದೇವತೆ ಇಂದ್ರ. ಆತನ ಪ್ರಭಾವದಿಂದ ಜನಿಸಿದ

ನಾಟ್ಯ ಇಂದ್ರನ ಸಭೆಯಲ್ಲೇ ಆರಂಭವಾಯಿತು ಎಂಬುದಾಗಿ ನಾಟ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಅಂತೆಯೇ ಯಕ್ಷಗಾನದಲ್ಲೂ ಪ್ರತಿ ಪ್ರಸಂಗದಲ್ಲಿ ಇಂದ್ರನ ಪ್ರಭಾವ ಇರುತ್ತದೆ.

ನಿಶಿ ವಲ್ಗುನಾದಮ್

ರಾತ್ರೆಯಲ್ಲಿ ಮಳೆ ಹಿತವಾದ ನಾದವನ್ನು ಸೂಸುತ್ತದೆ.

ಯಕ್ಷಗಾನ ಪ್ರದರ್ಶನ ರಾತ್ರೆಯಲ್ಲಿ ಹಿತವಾದ ರಾಗಾದಿಗಳಿಂದ ಕೂಡಿರುತ್ತದೆ

ಚಾಪಾಶುಗಾಂಶಮ್

ಕಾಮನಬಿಲ್ಲು ಹಾಗೂ ಗಾಳಿಯ ಪ್ರಭಾವ ಮಳೆಯಲ್ಲಿರುತ್ತದೆ. (ಚಾಪ= ಕಾಮನಬಿಲ್ಲು, ಆಶುಗ=ಗಾಳಿ)

ಬಿಲ್ಲು ಬಾಣಗಳಿಂದ ಕೂಡಿದ

(ಚಾಪ= ಬಿಲ್ಲು, ಆಶುಗ=ಬಾಣ)

ಅನಿಶ

ನಿರಂತರವಾಗಿ

ನಿರಂತರವಾಗಿ

ಕರವಿಪ್ರಯೋಗಮ್

ಸೂರ್ಯಕಿರಣಗಳ ಪ್ರಯೋಗ ಇಲ್ಲದಿರುವಂತಹ (ಕರ=ಕಿರಣ). ಅಥವಾ ಕಂ ಎಂದರೆ ನೀರು ರವಿ ಎಂದರೆ ಸೂರ್ಯ. ಒಮ್ಮೆ ಮಳೆಯ ಪ್ರಯೋಗ ಒಮ್ಮೆ ಸೂರ್ಯನ ಪ್ರಯೋಗ ಇರುವಂತಹ.

ಕರ ಎಂದರೆ ಕೈ. ಕೈಯ ವಿಶಿಷ್ಟ ಪ್ರಯೋಗ ಇರುವಂತಹ

 

ಇಲ್ಲಿ ಹರಣಂ ಎಂಬಲ್ಲಿ ಹರ ಎನ್ನುವ ಪದ, ನಿಶಿ ವಲ್ಗುನಾದಮ್ ಎಂಬಲ್ಲಿ ಶಿವ ಎಂಬ ಪದ, ಅನಿಶಂ ಕರವಿಪ್ರಯೋಗಮ್ ಎನ್ನುವ ಪದ, ಸದೃಶಂ ಭುವಿ ಎಂಬಲ್ಲಿ ಶಂಭು ಎನ್ನುವ ಪದವನ್ನೂ ಕಾಣಬಹುದು.

ಪದ್ಯಬಂಧದಲ್ಲಿ ವಿನೂತನ ರಾಮಾಯಣ

  ‘ ಅವ್ಯಯ ’ ಎಂಬ ಕಾವ್ಯನಾಮದಿಂದ ಚೇತನ್ ಅವರು ಬರೆದಿರುವಂತಹ ಪ್ರತಿಮಾಲಾರಾಮಾಯಣ ಚೇತೋಹಾರಿಯಾಗಿದೆ. ಈ ಮೊದಲು ಕನ್ನಡ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಚೇತನ್ ಅವರ ಅನೇಕ ಬಿ...